ಮಂಗಳೂರು:
ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಂದ ಬರೋಬ್ಬರಿ 290 ಗ್ರಾಂ ಗಾಂಜಾ ವಶಪಡಿಸಿಕೊಂಡು, ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಕಾಲೇಜು ಆಡಳಿತ ಮಂಡಳಿಯೇ ಸಕ್ರಿಯವಾಗಿ ತಪಾಸಣೆ ನಡೆಸಿ ಗಾಂಜಾವನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದು, ಈ ಕ್ರಮವನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಶ್ಲಾಘಿಸಿದ್ದಾರೆ.
ಘಟನೆಯ ವಿವರ ಹಾಗೂ ವೈದ್ಯಕೀಯ ತಪಾಸಣೆ:
ಪೋಲಿಸ್ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿ ಜಂಟಿಯಾಗಿ ನಡೆಸಿದ ಜಾಗೃತಿ ಅಭಿಯಾನದ ನಂತರ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ತನಿಖಾ ನಿಗಾವನ್ನು ಬಿಗಿಗೊಳಿಸಲಾಗಿತ್ತು. ಈ ವೇಳೆ ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಇಡಲಾಗಿದ್ದ ಸುಮಾರು 290 ಗ್ರಾಂ ಗಾಂಜಾ ಜೊತೆಗೆ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ರೆಡ್ಹ್ಯಾಂಡ್ ಆಗಿ ಹಿಡಿದು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ.
ಬಂಧಿತ ಮೂವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಮೂವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಎನ್ಡಿಪಿಎಸ್ ಕಾಯ್ದೆಯಡಿ FIR – ಜಾಮೀನು ಮಂಜೂರು:
ಘಟನೆ ಸಂಬಂಧ ಎನ್ಡಿಪಿಎಸ್ (NDPS) ಕಾಯ್ದೆಯ ಕಲಂ 27(b) (ಮಾದಕ ದ್ರವ್ಯ ಸೇವನೆ) ಹಾಗೂ 8(c) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಕಾಲೇಜಿಗೆ ಗಾಂಜಾ ತಂದಿದ್ದ ಪ್ರಮುಖ ವಿದ್ಯಾರ್ಥಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಆತನ ಶೈಕ್ಷಣಿಕ ಭವಿಷ್ಯ ಹಾಗೂ ಆತನ ಬಳಿ ಇದ್ದ ಗಾಂಜಾದ ಪ್ರಮಾಣವನ್ನು ಪರಿಗಣಿಸಿ, ಮಾನ್ಯ ನ್ಯಾಯಾಲಯವು ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಮುಖ್ಯ ಪೆಡ್ಲರ್ (ಸರಬರಾಜುದಾರ) ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಶ್ಲಾಘನೆ:
ಕಾಲೇಜಿನ ಈ ಭರವಸೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಇದು ಅತ್ಯಂತ ಪ್ರೋತ್ಸಾಹದಾಯಕ ಬೆಳವಣಿಗೆ. ಮಂಗಳೂರಿನ ಹಲವು ಕಾಲೇಜುಗಳು ಈಗ ಸ್ವಯಂಪ್ರೇರಿತವಾಗಿ ತಪಾಸಣೆ ನಡೆಸುತ್ತಿದ್ದು, ಕಾಲೇಜುಗಳಲ್ಲಿರುವ ಆಂಟಿ-ಡ್ರಗ್ ಕಮಿಟಿಗಳು (ADC) ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಜಿಲ್ಲೆಯ ಎಲ್ಲಾ ಕಾಲೇಜುಗಳು ಇದೇ ರೀತಿಯ ಕಟಿಬದ್ಧತೆ ಪ್ರದರ್ಶಿಸಿದರೆ, ಅತ್ಯಲ್ಪ ಅವಧಿಯಲ್ಲಿ ನಮ್ಮ ಕ್ಯಾಂಪಸ್ಗಳನ್ನು ಮಾದಕದ್ರವ್ಯ ಮುಕ್ತ ಹಾಗೂ ಆರೋಗ್ಯಕರ ವಾತಾವರಣವನ್ನಾಗಿ ಮಾಡಲು ಸಾಧ್ಯ," ಎಂದು ತಿಳಿಸಿದ್ದಾರೆ.
